Tuesday, December 4, 2012

Shri Krishnana Nooraru Geethegalu - 318

ಹರಿಭಜನೆ

ಜಾನಕಿ ವಲ್ಲಭ ಜಯತು ಶ್ರೀರಾಮ
ಬಕುತ ಸುಲಭ ಶ್ರೀಕಲ್ಯಾಣಧಾಮ
ಜಯಜಯ ರಾಮ ಜಗದೀಶ ರಾಮ
ದಶರಥಸುತ ವಂದೆ ರಘುಕುಲಸೋಮ

ರಾಧಾಹೃದಯ ಶ್ರೀನೀಲಮೇಘಶ್ಯಾಮ
ಕೃಷ್ಣನ ಜಗದೊಳು ಸಿರಿ ಸುಖ ಕ್ಷೇಮ
ಜಯಜಯ ರಾಮ ದ್ವಾರಕೆ ಶ್ಯಾಮ
ನವನೀತಚೋರನೆ ದೇವಕಿ ಪ್ರೇಮ (೧)

ಹನುಮಯ್ಯಗೊಲಿದನೆ ತ್ರೇತಾ ರಾಮ
ಭೀಮಯ್ಯನಭಯನೆ ಗೋಕುಲ ಶ್ಯಾಮ
ರಾಯರಾಯರಿಗೊಲಿದ ಶ್ರೀನಿವಾಸ ವಿಠಲನೆ
ಸುಖದೊಳು ಸಲಹೊ ನಾನು ಸುಧಾಮ (೨)

ಜಾನಕಿ ವಲ್ಲಭ ಜಯತು ಶ್ರೀರಾಮ
ಬಕುತ ಸುಲಭ ಶ್ರೀಕಲ್ಯಾಣಧಾಮ
ಜಯಜಯ ರಾಮ ಜಗದೀಶ ರಾಮ
ದಶರಥಸುತ ವಂದೆ ರಘುಕುಲಸೋಮ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೫.೧೨.೨೦೧೨

Friday, September 7, 2012

Shri Krishna Nooraru Geethegalu - 284

ಮೂಲರೂಪರ ಮುಂದೆ ನಲಿವ

ಮೂಲರೂಪರ ಮುಂದೆ ನಲಿವ ಯತಿಯ ನೋಡಿರೊ
ಭವದ ಭಂಗವ ನೀಗಿ ಸುಕೃತದ ಗತಿಯು ಕಾಣಿರೊ

ಪೂರ್ಣಚಂದಿರ ವದನ ಸುಂದರ ಗುರುಸುಧೀಂದ್ರರ ಶಿಷ್ಯರ
ದ್ವೈತದಂಬುಧಿಯೊಳಗೆ ನಗುವ ಭುವನಗಿರಿಯ ರಾಯರ (೧)

ಮೂಲರಾಮರ ದಿವ್ಯಚರಣವ ನಂಬಿ ಭಜಿಸಿದ ಹನುಮರ
ಕಳೆದು ಕಲಿಯೊಳು ನರರ ಅನ್ಯವ ಮುಕುತಿಯೀಯುವ ದೇವರ (೨)

ತುಂಗಾತೀರದ ವೃಂದಾವನದೊಳು ನಿಂತು ಎಮ್ಮನು ಕಾವರ
ಶ್ರೀನಿವಾಸ ವಿಠಲ ನೇಮಕ ಮಂತ್ರಾಲಯದ ಪೂಜ್ಯರ (೩)

ಮೂಲರೂಪರ ಮುಂದೆ ನಲಿವ ಯತಿಯ ನೋಡಿರೊ
ಭವದ ಭಂಗವ ನೀಗಿ ಸುಕೃತದ ಗತಿಯು ಕಾಣಿರೊ

        ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೦೭.೦೯.೨೦೧೨